Website designed by @coders.knowledge.

Website designed by @coders.knowledge.

Popular Superstitions of India | ಭಾರತದಲ್ಲಿ ಜನಪ್ರಿಯ ಮೂಢನಂಬಿಕೆಗಳು

popular superstitions of india in kannada

ನಿನಗೆ ಪರ್ವತೋಪಮವಾದ ದೃಢ ನಂಬಿಕೆಯಿದ್ದರೆ ನಾನೇ ನಿನಗೆ ದೊರೆಯುವ ಎಂಬ ಭಗವದ್ಗೀತೆಯ ಶ್ರೀಕೃಷ್ಣನ ಉಪದೇಶವನ್ನು ಪಾಲಿಸುವ ನಮ್ಮ ಹಿಂದೂಗಳಲ್ಲಿ ಅಚಲ ನಂಬಿಕೆ, ದೃಢವಿಶ್ವಾಸ ಅಂತಃಶ್ರದ್ಧೆಗಳಿಂದ ಮಹಾನ್ ಗುಣಗಳು ಯುಗದಿಂದ ಯುಗಕ್ಕೆ ಹರಿದು ಬಂದಿವೆ.

ಹಾಗಾದರೆ ನಂಬಿಕೆಯಂದರೇನು? ದೇಶ, ಕಾಲಗಳ ಹಿನ್ನೆಲೆಯಲ್ಲಿ ಪರಂಪರಾನುಗತ ಜ್ಞಾನ, ದಿವ್ಯಾನುಭವ, ಕಾಲ್ಪನಿಕ ಆಲೋಚನೆ ಹಾಗೂ ಅತೀಂದ್ರಿಯ ವ್ಯಾಪಾರದ ಫಲವಾಗಿ ಮೂಡಿದ ಶ್ರದ್ಧೆಯೇ ನಂಬಿಕೆ. ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟ ಸಾಮಾಜಿಕ ಮತ್ತು ಮನೋವೈಜ್ಞಾನಿಕ ಅಭ್ಯಾಸಗಳ ಮೊತ್ತವೇ ಅದು. ಈ ನಂಬಿಕೆಗಳ ಜಗತ್ತು ಬದುಕಿನಷ್ಟೇ ವೈವಿಧ್ಯಮಯವಾಗಿದೆ; ವಿಶಾಲವಾಗಿದೆ ಹಾಗೂ ಸಂಕೀರ್ಣವಾಗಿದೆ. ಭಯ, ಭಾವುಕತೆ ಮತ್ತು ಆಕಸ್ಮಿಕ ಘಟನೆಗಳು, ಕನಸುಗಳು, ಅಜ್ಞಾನ ಇತ್ಯಾದಿಗಳಿಂದ ಹುಟ್ಟಿ, ಯುಕ್ತಿವಂತರ ಸ್ವಾರ್ಥದ ಸಕಾರಕ್ಕೆ ಸಹಾಯಕವಾಗುತ್ತಿರುವ ಅರ್ಥಹೀನ, ವೈಚಾರಿಕತೆಯಿಲ್ಲದ ಟೊಳ್ಳು ನಂಬಿಕೆಗಳೇ ಮೂಢನಂಬಿಕೆಗಳು, ಪ್ರಪಂಚದ ಹಲವಾರು ಪ್ರಾಚೀನ ಅರ್ವಾಚೀನ ಜನಾಂಗಗಳು ಮೂಢ ನಂಬಿಕೆಗಳ ನಡುವೆಯೇ ಜನ್ಮತಳೆದಿವೆ. ಆ ಜನಾಂಗವನ್ನು ವಿವಿಧ ಮೂಢ ನಂಬಿಕೆಗಳು ತೊಟ್ಟಿಲಿನಿಂದ ತುವೆಯವರೆಗೆ ನಿಯಂತ್ರಿಸಿವೆ, ನಿಯಂತ್ರಿಸುತ್ತಿವೆ.

ಪಿತೃಪೂಜೆ, ವಿರೋಪಾಸನೆ, ಭೂತಾರಾಧನೆ, ಗ್ರಾಮ ದೇವತಾರಾಧನೆ, ಪ್ರಾಣಿ ಪೂಜೆ, ಪಕ್ಷಿ ಪೂಜೆ, ಆಯುಧ ಪೂಜೆ ಇವೇ ಮೊದಲಾದ ಪೂಜೆಗಳ ಆಗರವಾಗಿರುವ ಭಾರತದಲ್ಲಿ ಹಲವಾರು ಮೂಢನಂಬಿಕೆಗಳು ಪ್ರಚಲಿತದಲ್ಲಿವೆ. ಅವುಗಳನ್ನು ಧಾರ್ಮಿಕ, ಐತಿಹಾಸಾತ್ಮಕ, ಗೃಹಸಂಬಂಧಿ, ಜ್ಯೋತಿಷ್ಯಾತ್ಮಕ ಮತ್ತು ಸಂಕೀರ್ಣ ಮೂಢನಂಬಿಕೆಗಳೆಂಬ ಅನೇಕ ವಿಭಾಗದಡಿಯಲ್ಲಿ ಪರಿಚಯಿಸಲಾಗಿದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಭೇಟಿ ನೀಡಬೇಕಾದ 8 ಪ್ರವಾಸಿ ತಾಣಗಳು

1. ಧಾರ್ಮಿಕ ಮೂಢನಂಬಿಕೆಗಳು.

religion superstitions in india in kannada
religion superstitions

• ವಿನಾಯಕ ಚತುರ್ಥಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರುತ್ತದೆ.

• ಕೈಯಲ್ಲಿ ಚಪ್ಪಲಿ ಹಿಂದುಕೊಂಡರೆ ಭೂತ - ಪಿಶಾಚಿಗಳು ಹತ್ತಿರ ಸುಳಿಯುವುದಿಲ್ಲ.

• ಸತ್ತವರಿಗೆ ನೀಡಿದ ಆಹಾರವನ್ನು ಹಾಗೆ ತಿನ್ನದಿದ್ದರೆ ಅವರಿಗೆ ಮುಕ್ತಿ ಸಿಗುವುದಿಲ್ಲ.

• ಕಟ್ಟಿಗೆ ಹೊರೆ, ಹಣ, ಬೆಕ್ಕು, ಬೆಂಕಿ, ವಿಧವೆ, ವಿಕಲಾಂಗರು, ಹಜಾಮ್,ಗುದ್ದಲಿ, ಚಲಿಕಿ, ಪುಟ್ಟಿ, ಖಾಲಿ ಪಾತ್ರೆ ಎದುರಾಗುವುದು ಅಶುಭ.

• ಶುಭ ಮಂಗಳ ಕಾರ್ಯಗಳಲ್ಲಿ ಊಟಕ್ಕೆ ಕುಳಿತಾಗ ದೀಪ ಆರುವುದು, ದೇವರ ಮುಂದಿನ ದೀಪ ನಂದುವುದು ಕೇಡಿನ ಸೂಚಕ.

• ಸೂತಕದಲ್ಲಿರುವವರು, ಮುಟ್ಟಾದ ಸ್ತ್ರೀಯರು, ಘೋರಪಾತಕಿಗಳು ಅಕಸ್ಮಾತ್ತಾಗಿ ಮುಟ್ಟಿದರೆ ಸ್ನಾನ ಮಾಡಬೇಕೆಂಬ ಕಟ್ಟಳೆ.

• ಬನ್ನಿಮರ, ಅರಳಿಮರ, ಪತ್ರಿಮರಗಳನ್ನು ಪೂಜಿಸಿ ಸುತ್ತುವುದರಿಂದ ಸಂತಾನ ಫಲ ದೊರೆಯುತ್ತದೆ.

• ಮನುವಿನ ಪ್ರಕಾರ, ಸತ್ತವರಿಗೆ ಬಿಟ್ಟ ತರ್ಪಣಗಳನ್ನು ಪಿತೃ ದೇವತೆಗಳು ಅವರಿಗೆ ತಲುಪಿಸುತ್ತಾರೆ.

• ತೃಪ್ತಿಯಿಲ್ಲದ ಜನ, ಜಿಪುಣರು, ಆಸೆಬುರುಕರು ಸತ್ತ ಮೇಲೆ ಪಿಶಾಚಿಗಳಾಗುತ್ತಾರೆ.

• ಧರ್ಮ - ದೇವರುಗಳ ಹೆಸರಿನಲ್ಲಿ ಪಕ್ಷಿ - ಪ್ರಾಣಿಗಳನ್ನು ದೇವರಿಗೆ ಬಲಿ ಕೊಡುವುದು.

• ಶುಭ - ಮಂಗಲ ಕಾರ್ಯಗಳಿಗೆ ಹೋಗುವಾಗ, ಬರುವಾಗ ಮತ್ತು ಕಾರ್ಯಗಳು ನಡೆಸುವಾಗ ಕಸ ಗೂಡಿಸಬಾರದು.

• ಪೂಜಾ ಪುನಸ್ಕಾರಗಳು ನಡೆಯುವಾಗ ಅರಿಶಿಣ ಕುಂಕುಮ ಚೆಲ್ಲಿದರೆ ಮನೆಯಲ್ಲಿ ಜಗಳ ಉಂಟಾಗುತ್ತದೆ.

ಇದನ್ನು ಓದಿ: ಯಶಸ್ವಿಯಾಗಲು ಸ್ವಯಂ ಶಿಸ್ತಿನ 4 ಅಭ್ಯಾಸಗಳು

2. ಗೃಹ ಸಂಬಂಧಿ ಮೂಢನಂಬಿಕೆಗಳು.

house related superstitions in india in kannada
house superstitions

• ಮಳ್ಳು, ವರ್ಚುಗಳೆರುವವರು, ಆರು ಬೆರಳಿರುವವರು, ಚಪ್ಪಗಾಗಿರುವವರು ಅದೃಷ್ಟವಂತರು.

• ಉಪ್ಪು ತುಳಿಯುವುದು, ಚಲ್ಲುವುದು ಅಶುಭ, ಏಕೆಂದರೆ ಅದು ಯಮ ದೇವನಿಗೆ ಪೂಜಿಸುವ ವಸ್ತುವಾಗಿದ್ದು, ಚಲ್ಲುವಾಗ ಯಮಲೋಕದ ದೇವತೆಗಳ ಲಕ್ಷ್ಯ ಚಲ್ಲುವವನಡೆಗಾಕರ್ಷಿತನಾಗಿ ಅವನಿಗೆ ಕೇಡಾಗುವುದು.

• ಗಂಡು ಮಕ್ಕಳಿಗೆ ಬಲಗಣ್ಣು ಹಾರಿದರೆ ಶುಭ, ಎಡಗಣ್ಣು ಹಾರಿದರೆ ಅಶುಭ, ಹೆಣ್ಣುಮಕ್ಕಳಿಗೆ ಎಡಗಣ್ಣು ಹಾರಿದರೆ ಶುಭ, ಬಲಗಣ್ಣು ಹಾರಿದರೆ ಅಶುಭ.

• ಮುತ್ತೈದೆಯ ಬಳೆಗಳು ಶುಭದಿನಗಳಲ್ಲಿ ಒಡೆಯುವುದು, ಮಂಗಳಸೂತ್ರ ಹರಿಯುವುದು, ಮಣ್ಣಿನ ಗಡಿಗೆಗಳು, ಕನ್ನಡಿ ಭಗ್ನ ಆಗುವುದು ಅಶುಭ. ಆಷಾಢ, ಪುಷ್ಯ ಮಾಸಗಳಲ್ಲಿ ಮದುವೆ ಮಾಡಬಾರದು.

• ಶುಭ ಮಂಗಳ ಕಾರ್ಯಗಳಲ್ಲಿ ಊಟಕ್ಕೆ ಕುಳಿತಾಗ ದೀಪ ಆರುವುದು ಅಶುಭ.

• ತಡವಾಗಿ ಅಥವಾ ಮೂಲಮಕ್ಕಳು ಸತ್ತ ನಂತರ ಹುಟ್ಟುವ ಮಕ್ಕಳಿಗೆ ಅಸಹ್ಯವಾದ ಹೆಸರನ್ನು ಇಡುವುದು, ಮುರುವು ಹಾಕಿಸುವುದು.

• ತನ್ನು ಇದ್ದು ಸತ್ತವರನ್ನು ಹೂತರೆ ಮಳೆ ಬರುವುದಿಲ್ಲ ಸುಡಬೇಕು.

• ಗರ್ಭಿಣಿಯರು ಎರೆಮಣ್ಣು, ಖಣಿ, ವಿಭೂತಿ ತಿನ್ನುವುದು ಬಯಕೆಗಳು.

• ಬೆಳಗಿನ ಜಾವದಲ್ಲಿ ಕೆಟ್ಟ ಕನಸುಗಳು ಬಿದ್ದರೆ ಕೇಡು ಸಂಭವಿಸುತ್ತದೆ.

• ಮೂರುಸಂಜೆಯ ಹೊತ್ತಿನಲ್ಲಿ ಮಲಗಬಾರದು.

• ಹೆಣ್ಣುಮಕ್ಕಳು ಅಕ್ಕಿ ಆರಿಸುವಾಗ ಅಕ್ಕಿ ತಿಂದರೆ ಅವರ ಮದುವೆಯಲ್ಲಿ ಮಳೆ ಬರುತ್ತದೆ.

• ತುಂಬಿದ ತಂಬಿಗೆಯನ್ನು ಕೈಬಿಟ್ಟರೆ ಮಳೆ ಬರುತ್ತದೆ.

ಇದನ್ನು ಓದಿ: ನಿಮಗೆ ಗಮನ ಹರಿಸಲು ಏಕೆ ಸಾಧ್ಯವಾಗುತ್ತಿಲ್ಲ

3. ವೈದ್ಯಕೀಯ ಮೂಢನಂಬಿಕೆಗಳು.

• ಸಾಂಕ್ರಾಮಿಕ ರೋಗ ದೇವತೆಯನ್ನು ಊರಾಚೆ ಸಾಗಿಸಲು ಆ ಹಳ್ಳಿಯ ಜನರೆಲ್ಲರೂ ಸೇರಿ ಅಕ್ಕಿ, ತೆಂಗಿನಕಾಯಿ, ನಿಂಬೆಹಣ್ಣು ಕೆಂಪು ಹೂಗಳು, ಒಂದು ಮೇಕೆ / ಹುಂಜವನ್ನು ದೋಣಿಯಲ್ಲಿಟ್ಟು ಮುಂದಿನ ಹಳ್ಳಿಗೆ ಸಾಗಿಸುತ್ತಾರೆ. ಈ ಕ್ರಿಯೆ ನದಿಯೋ, ಕಾಡೋ ಸಿಗುವವರೆಗೆ ನಿರಂತರವಾಗಿ ನಡೆದು ಕೊನೆಗೆ ಹಳ್ಳಿಯ ಜನ ಆ ವಸ್ತುಗಳನ್ನು ನದಿಗೆಸೆದು ರೋಗದಿಂದ ಮುಕ್ತರಾಗುತ್ತಾರೆ.

• ಬಹಳ ಜನರು ದನಗಳು ರೋಗಸ್ತವಾದರೆ ಊರಲ್ಲಿಯ ಹಳೆ ಬುಟ್ಟಿ, ಮೊರ, ಪೊರಕೆ, ಕಸಕಡ್ಡಿಗಳನ್ನು ತಂದು ಊರಾಚೆ ರಾಶಿ ಹಾಕುತ್ತಾರೆ. ತನ್ಮೂಲಕ ಉಡುಗಲಜ್ಜಿ (ದೆವ್ವ) ಯನ್ನು ಊರಾಚೆ ಹಾಕುವ ಕ್ರಮ ಜಾರಿಯಲ್ಲಿದೆ.

• ಭೀಕರವಾದ ದೆವ್ವದ ಮುಖವಾಡ ಹಾಕಿಕೊಂಡು ಕುಣಿಯುವ ಮೂಲಕ ದೆವ್ವವನ್ನು ಬಿಡಿಸುವ ಪದ್ಧತಿ ರೂಢಿಯಲ್ಲಿದೆ.

• ದೇವರುಗಳ ಹೆಸರಿನಲ್ಲಿ ಹರಕೆ, ಬಲಿ ಕೊಡುವುದು (ಕುರಿ, ಕೋಣ, ಮೇಕೆ, ಕೋಳಿ ಇತ್ಯಾದಿ).

• ಮಕ್ಕಳಿಗೆ ಏಳುವ ದಡಾರದಮ್ಮನನ್ನು ಹೋಗಲಾಡಿಸಲು ವೈದ್ಯರ ಹತ್ತಿರ ಹೋದಾಗ ಅಮ್ಮನನ್ನು ಕಳಿಹಿಸುವ ನಿಯಮವನ್ನು ಮೊದಲು ವಿಧಿವತ್ತಾಗಿ ಮುಗಿಸಿಕೊಂಡು ಬನ್ನಿ ಎಂದು ಹೇಳುವುದು.

ಇದನ್ನು ಓದಿ: ಸಂಪತ್ತು, ಆರೋಗ್ಯ ಮತ್ತು ಯಶಸ್ಸಿಗೆ 6 ಬೆಳಗಿನ ಅಭ್ಯಾಸಗಳು

4. ಪ್ರಾಣಿ ಸಂಬಂಧಿ ಮೂಢನಂಬಿಕೆಗಳು.

animal superstitions in india in kannada
animal superstitions

• ತಲೆಯ ಮೇಲೆ ಕಾಗೆ ಕುಳಿತರೆ, ಅದರ ಕಸ ತಲೆಯ ಮೇಲೆ ಬಿದ್ದರೆ ಸಾವು ನಿಶ್ಚಿತ.

• ಹಲ್ಲಿ ತಲೆಯ ಮೇಲೆ ಬಿದ್ದರೆ, ಬೆಕ್ಕು ಅಡ್ಡ ಬಂದರೆ, ಗೂಬೆಯ ಕೂಗು ಕೇಳಿದರೆ, ಬೆಕ್ಕು ಮಂಗನನ್ನು ಹೊಡೆದರೆ ಕೇಡಾಗುವುದು.

• ಕಪ್ಪೆಗಳು ವಟಗುಟ್ಟಿದರೆ, ಕೋಳಿ ಬಿಸಿಲಿನಲ್ಲಿ ಗರಿಕೆದರಿದರೆ ಮಳೆಬರುವುದು.

• ಹಲ್ಲಿ ಲೊಚಗುಟ್ಟಿದರೆ ಆಡಿದ ಮಾತು ನಿಜವಾಗುವುದು.

• ಕತ್ತೆಗಳು, ಕಪ್ಪೆಗಳ ಮೆರವಣಿಗೆ ಮಾಡಿದರೆ, ಗುರ್ಜಿ ಆಡಿದರೆ ಮಳೆ ಬರುವುದು.

• ರತ್ನಪಕ್ಷಿ (ಸಂಬರಗಾಗಿ), ನರಿಯಣ್ಣ ಕಂಡರೆ ಅದೃಷ್ಟ.

• ನಾಯಿಗಳು ಆಕಾಶಕ್ಕೆ ಮುಖಮಾಡಿ ಬೊಗಳಿದರೆ ಮಳ ದೇವನನ್ನು ಕರೆಯುತ್ತವೆ.

ಇದನ್ನು ಓದಿ: ಕಡಿಮೆ ಮಾತನಾಡುವ ಜನರ 5 ಗುಣಗಳು

5. ಮಂತ್ರ ಸಂಬಂಧಿ ಮೂಢನಂಬಿಕೆಗಳು.

spell superstitions in india in kannada
spell superstitions

• ಪ್ರಿಯ ಜನರನ್ನು ವಶೀಕರಣ ಮಾಡಿಕೊಳ್ಳಲು, ಬಾಲಗ್ರಹ ಪೀಡೆಗಳನ್ನು ನಿವಾರಿಸಲು ಅಂತ್ರಗಳು ಉಪಯುಕ್ತ, ಹುಲಿಯುಗುರು, ಹಂದಿಯ ಮೂಳೆ, ಕರಡಿಯ ಕೂದಲುಗಳನ್ನು ಚಿನ್ನ - ಬೆಳ್ಳಿಯ ದಾರದೊಂದಿಗೆ ಕಟ್ಟಿಕೊಂಡರೆ ದೆವ್ವ ಭೂತಗಳ ಬಾಧೆಯಿಂದ ಪಾರಾಗಬಹುದು.

• ಕೆಟ್ಟ ದೃಷ್ಟಿಯಿಂದಾದ ತಲೆನೋವು, ನಿದ್ರಾನಾಶ, ಪೆಟ್ಟುಗಳು ಇತ್ಯಾದಿ ಗಳನ್ನು ಮಂತ್ರಗಳಿಂದ, ವಾಮಾಚಾರದಿಂದ, ತಾಯಿತಾದಿಗಳಿಂದ ಪರಿಹರಿ ಸುವುದು.

• ಮಾಟ-ಮಂತ್ರ, ಜಾದು ಮಾಡುವಾಗ ಕೈಕಟ್ಟಿ ನಿಲ್ಲಬಾರದು, ಇತ್ಯಾದಿ.

ಇದನ್ನು ಓದಿ: ನೀವು ಯೋಚಿಸುವುದಕ್ಕಿಂತ ಹೆಚ್ಚು ಆಕರ್ಷಕವಿರುವ 13 ರಹಸ್ಯ ಚಿಹ್ನೆಗಳು

6. ನೈಸರ್ಗಿಕ ಮೂಢನಂಬಿಕೆಗಳು.

natural superstitions in india in kannada
natural superstitions

• ಅವಳಿ ಬಾಳೆಹಣ್ಣು ತಿಂದರೆ ಅವಳಿ ಮಕ್ಕಳು ಹುಟ್ಟುತ್ತವೆ.

• ಹಣ್ಣು ಬಿಡದ ಹಲಸಿನಮರ, ಕುಂಬಳ ಬಳ್ಳಿಯ ಬೇರಿಗೆ ಮೊಳೆ ಹೊಡೆದರೆ ಫಲ ಬಿಡುತ್ತದೆ.

• ಬೆಟ್ಟದ ಮೂಲೆಯ ಗಾಳಿ ಬೀಸಿದರೆ ಮಳೆ ಬರುವುದಿಲ್ಲ.

• ತೆಂಗಿನ ಕಾಯಿ ಹೊಡೆವಾಗ ತೊಟ್ಟು ಕಾಯಿ ಹೊಡೆದರೆ ಮಗು ಆಗುತ್ತದೆ.

• ಹೆಣ್ಣು ಹೊಸದಾಗಿ ಗಂಡನ ಮನೆಗೆ ಬರುವಾಗ ಬಲಗಾಲು ಇಟ್ಟು ಬಂದರೆ ಶುಭ, ಎಡಗಾಲಿಟ್ಟು ಬಂದರೆ ಅಶುಭ.

• ಸೀನುವುದರಲ್ಲಿ ಒಂಟಿ ಸೀನು ಅಶುಭ, ಜೋಡಿ ಸೀನು ಶುಭ.

• 1, 3 ನೇ ಅಂಕ ಅಶುಭ (ಬೆಸ ಸಂಖ್ಯೆಗಳು ಅಶುಭ), ಸರಿ ಸಂಖ್ಯೆಗಳು ಶುಭ.

• ತಳಿಕೆ ಹಾಕಿರುವ ಜೋಡಿ ನಾಗಗಳನ್ನು ಕಂಡರೆ ಸುಳ್ಳು ಹೇಳುವುದು ಇಲ್ಲವೇ ಮೈಮೇಲಿನ ಸ್ವಲ್ಪ ಬಟ್ಟೆ ಹರಿದುಕೊಳ್ಳುವುದು.

• ಹೋಳಿಗೆ ಮಾಡಿದ ಮೇಲೆ ಕಣಕ ಉಳಿದರೆ ಗಂಡು ಮಗು ಹುಟ್ಟುತ್ತದೆ.

ಇದನ್ನು ಓದಿ: ಎತ್ತರವನ್ನು ಹೆಚ್ಚಿಸುವ 8 ಅದ್ಭುತ ಆಹಾರಗಳು

7. ಜ್ಯೋತಿಷ್ಯಾತ್ಮಕ ಮೂಢನಂಬಿಕೆಗಳು.

astrological superstitions in india in kannada
astrological superstitions

• ಗ್ರಹಗಳಲ್ಲಿ ಗುರು ಉತ್ತಮ ಫಲವನ್ನಿತ್ತರೆ, ಶುಕ್ರ ಸಂತತಿಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ, ಶನಿ ದುಷ್ಟ, ಬುಧ ಚಂಚಲ.

• ಅಶ್ವಿನಿ, ಮಾಘ, ಮೂಲ ನಕ್ಷತ್ರಗಳ 1ನೇ, 2ನೇ, 3ನೇ ಚರಣದಲ್ಲಿ ಶಿಶು ಜನಿಸಿದರೆ ಕ್ರಮವಾಗಿ ತಂದೆಗೆ, ತಾಯಿಗೆ ಹಾಗೂ ಐಶ್ವರ್ಯಕ್ಕೆ ತೊಂದರೆಯಾಗುವುದು. ಮೂರು ಗಂಡಿನ ನಂತರ ಹೆಣ್ಣು ಅಥವಾ ಮೂರು ಹೆಣ್ಣಿನ ನಂತರ ಗಂಡು ಮಗುವಾದ 'ತ್ರಿಕ ಜನನ ದೋಷ' ದಿಂದ ತಂದೆ - ತಾಯಿ ಹಾಗೂ ಬಂಧುಗಳಿಗೆ ಪೀಡಕಾರಿ.

• ಕನಸಿನಲ್ಲಿ ಸೂರ್ಯ, ಚಂದ್ರ, ಬಸವ ಮತ್ತು ಬೆಟ್ಟಗುಡ್ಡಗಳನ್ನು ಕಂಡರೆ ಶುಭ.

ಇದನ್ನು ಓದಿ: ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಣ ಮಾಡುವುದು ಹೇಗೆ?

8. ಔದ್ಯೋಗಿಕ ಮೂಢನಂಬಿಕೆಗಳು.

• ಗೋಕರ್ಣದಲ್ಲಿ ಬಹಳ ದಿನ ಮಳೆ ಬಾರದಿದ್ದರೆ ಇಂದ್ರನ ಮೂರ್ತಿ ಕಣ್ಣಿಗೆ ಮೆಣಸಿನ ಪುಡಿ ಹಾಕಿ ಬಿಸಿಲಿನಲ್ಲಿಡುವ ಮೂಲಕ ಮಳೆ ಭರಿಸಬಹುದು.

• ವ್ಯಾಪಾರದ ಸಮಯದಲ್ಲಿ ಮಾಲೀಕನಾಗಲೀ, ಕೆಲಸಗಾರನಾಗಲೀ ತೂಕಡಿಸಿದರೆ ವ್ಯವಹಾರ ಲಾಭದಾಯಕವಾಗಿ ಕುದುರುವುದಿಲ್ಲ.

ಇದನ್ನು ಓದಿ: ನಿಷ್ಕ್ರಿಯ ಆದಾಯದ ಮೂಲಗಳು ಯಾವುವು?

9. ಐತಿಹ್ಯಾತ್ಮಕ ಮೂಢನಂಬಿಕೆಗಳು.

legendary superstitions in india in kannada
legendary superstitions

• ಭೂಮಿಯೊಳಗಿನ ಗುಪ್ತನಿಧಿಯ ನೆರವಿನಿಂದಲೇ ಅನೇಕ ರಾಜ್ಯ ಸಂಸ್ಥಾನ ಗಳು ಜನ್ಮತಳೆದವು, ಕೆಂಪೇಗೌಡ ನಿರ್ಮಿತ ಬೆಂದಕಾಳೂರು (ಬೆಂಗಳೂರು) ತತ್ಪಲವಾಗಿಯೇ ತಲೆ ಎತ್ತಿ ನಿಂತಿತು.

• ದಕ್ಷಿಣ ಕನ್ನಡ ಜಿಲ್ಲೆಯ ಬಾರಕೂರಿನ ದೊರೆ ಭೂತಾಳ ಪಾಂಡ್ಯನ ತಂಗಿ ಅವಳ ಒಳಿತಿಗಾಗಿ ತನ್ನ ಮಗನನ್ನು ಭೂತಕ್ಕೆ ಬಲಿ ಕೊಟ್ಟಿದ್ದರಿಂದ ಸೋದರ ಆಸ್ತಿ- ಪಾಸ್ತಿಗಳು ಮುಂದೆ ಸೋದರಿಯ ಮಗನಿಗೆ ಸೇರಬೇಕೆಂಬ ನಿಯಮ ಜಾರಿಗೆ ತರುತ್ತಾನೆ. ಈ ಪದ್ಧತಿ ಭೂತರಾಧನೆ ರೂಢಿಯಲ್ಲಿರುವ ಕರ್ನಾಟಕ, ಕೇರಳದ ಕೆಲವು ಭಾಗಗಳಲ್ಲಿ ಈಗಲೂ ಪ್ರಚಲಿತದಲ್ಲಿದೆ.

• ಭೂಮಿಯಲ್ಲಿ ನಿಧಿ ದೊರತರೆ ಅವರಿಗೆ ಕೇಡು ಸಂಭವಿಸುತ್ತದೆ, ಇಲ್ಲವೇ ಕಾಡಾಟ ಬರುತ್ತದೆ, ಮನೆಯಲ್ಲಿ ಯಾರಾದರಿಗೂ ಸಾವು ಬರಬಹುದು.

ಹೀಗೆ ಭಾರತದಲ್ಲಿ ಕೋಟ್ಯಂತರ ದೇವರುಗಳಿರುವಂತೆ ಸುಮಾರು ಅದೇ ಪ್ರಮಾಣದಲ್ಲಿ ಮೂಢನಂಬಿಕೆಗಳೂ ಅಸ್ತಿತ್ವದಲ್ಲಿವೆ ಎಂದರೆ ತಪ್ಪಾಗಲಾರದು. ಪ್ರವರ್ಧಮಾನದ ಪಂಥಕ್ಕೆ ಅಡ್ಡಿಯಾಗುವ ಮೂಢನಂಬಿಕೆಗಳು ಅಲದ ಮರಕ್ಕೆ ಭಾರತೀಯ ಸಮಾಜದ ಮುಕ್ಕಾಲು ಭಾಗ ಜನತೆ ನೇಣು ಹಾಕಿಕೊಂಡಿದೆ. ಅದರ ಫಲಶೃತಿಯಾಗಿ "ಕೊಲ್ಲುತಿಹುದಾಜ್ಞಾನ ಸಂಪ್ರದಾಯದ ಬಾಹು ನಮ್ಮ ಬದುಕಿನ ಕುತ್ತಿಗೆಯ ಹಿಸುಕಿ ಎಂದು ರಾಷ್ಟ್ರಕವಿ ಕುವೆಂಪುರವರು ನೊಂದು ನುಡಿಯಬೇಕಾಯಿತು. ಡಾ. ಹೆಚ್. ನರಸಿಂಹಯ್ಯ, ಡಾ. ಸಿ.ಆರ್. ಚಂದ್ರಶೇಖರ್, ಎಂ.ಕೆ. ಸೇತುರಾಮ್ ಮೊದಲಾದವರು ಇವುಗಳ ಅಳಿವಿಗಾಗಿ ಬಂಡೇಳಬೇಕಾಯಿತು. "ರೋಗ ಮತ್ತು ದುಃಖಗಳು ತನುಮನಗಳನ್ನು ದಣಿಸಿದರೆ, ಮೂಢನಂಬಿಕೆಗಳು ಮನುಷ್ಯನ ಆತ್ಮಶಾಂತಿಗೆ ಧಕ್ಕೆಯುಂಟು ಮಾಡುತ್ತವೆ" ಎಂಬ ಚಾರ್ಲ್ಸ್ ಲ್ಯಾಂಬನ ಮಾತಿನ ಮರ್ಮವನ್ನು ಅರುಹಲು ಶ್ರಮಿಸಬೇಕು.

ಈ ಹೊಸ ಸಹಸ್ರಮಾನದಲಾದರೂ, ನಾವು "ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಭಾರ' ಎಂದು ನುಡಿಯುತ್ತಾ ಅವರನ್ನು ನಂಬು, ಇವರನ್ನು ನಂಬು ಎನ್ನುತ್ತಾರೆ ಜನ" ಆದರೂ ನಾನು ಹೇಳುವ "ನಿನ್ನನ್ನು ನೀನು ನಂಬು" ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ಅಚಲ ಆತ್ಮವಿಶ್ವಾಸದಿಂದ ಮೂಢನಂಬಿಕೆ ಗಳಿಗೆ ತಲೆಭಾಗದೇ, ಧೀರತೆಯಿಂದ ಮುನ್ನಡೆಯಬೇಕಾಗಿದೆ. ಇಂತಹ ಮೂಢನಂಬಿಕೆಗಳನ್ನು ಗುರುತಿಸಿ ಅವುಗಳ ಹಿಂದಿರುವ ವಿಚಾರವನ್ನು ಅಥವಾ ಅನೀತಿಯನ್ನು ಅರಿತುಕೊಂಡು ಮುನ್ನಡೆದದ್ದೇಯಾದರೆ ಸಮಾಜದಲ್ಲಿ ಮಾನವನು ಹಸನಾದ ಬದುಕನ್ನು ಸಾಗಿಸಿ ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನವನ್ನು ಪಡೆದುಕೊಳ್ಳುತ್ತಾನೆ.

ಒಂದು ದೃಷ್ಟಿಯಲ್ಲಿ ಆಳವಾಗಿ ಆಲೋಚನೆ ಮಾಡಿದರೆ ನಮ್ಮ ದೇಶದ ಸಿದ್ಧಾಂತಕ್ಕೂ, ಮೂಢನಂಬಿಕೆಗೂ ನೇರ ಸಂಬಂಧವಿಲ್ಲವೆನ್ನಬಹುದು. ಭಗವಂತನು ಸರ್ವಶಕ್ತ ಎಂದು ನಮ್ಮ ತತ್ವಗಳು ಹೇಳಿದ್ದನ್ನು ನಿಲ್ಲಿಸಿ ಹೇಗಿದ್ದರೂ ದೇವರು ಸರ್ವಶಕ್ತನಾಗಿರುವುದರಿಂದ ಓದದೆ ಪಾಸಾಗಲಿ, ಕೆಲಸ ಮಾಡದೆ ಬಡ್ತಿ ದೊರೆಯಲಿ, ದುಡಿಯದೆ ಹಣ ಬರಲಿ ಎಂಬ ಕೆಟ್ಟ ಸ್ವಾರ್ಥಪರ ದೃಷ್ಟಿಯಿಂದ ದೇವರನ್ನು ಪೂಜಿಸಲಾರಂಬಿಸಿದರು. ಒಂದೊಂದರ ಪರಿಹಾರಕ್ಕೆ ಒಂದೊಂದು ಬಗೆಯ ಪೂಜೆ ಮಾಡಬೇಕೆಂದು ಆಯಾ ದೇಶ-ಜನಾಂಗಗಳಲ್ಲಿ ಒಂದೊಂದು ಬಗೆಯಾಗಿ ನಿರ್ಣಯವಾಯಿತು. ಮಾನವನು ಜೀವನದಲ್ಲಿ ಅವನಷ್ಟೇ ಪ್ರಾಮಾಣಿಕವಾಗಿದ್ದರೂ ಹಲವು ಪ್ರಸಂಗಗಳಲ್ಲಿ ಅವನು ಸೋಲಬಹುದು. ಅಂತಹ ಸಂದರ್ಭದಲ್ಲಿ ಅವನು ಹುಚ್ಚನಾಗದಿರಬೇಕಾದರೆ ತನ್ನ ಅಭಿವೃದ್ಧಿಗೆ ದೈವಚಿತ್ತವಿಲ್ಲವೆಂದು ಸಮಾಧಾನಪಟ್ಟು ಕರ್ತವ್ಯಪರಾಜ್ಯಖನಾಗಿ ಬಾಳದಿರುವ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳುವಂತೆ ನಮ್ಮ ಧರ್ಮ ನಮಗೆ ಉಪದೇಶಿಸಿದೆ. "ಕರ್ತವ್ಯವನ್ನು ಮಾಡು, ಫಲವನ್ನು ನಿರೀಕ್ಷಿಸದಿರು" ಎಂದು ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದನು. ಆದರೆ ತಿಳಿಯದೆ ಜನ ದೇವರ-ಧರ್ಮದ ಹೆಸರಿನಲ್ಲಿ ಮೂಢನಂಬಿಕೆಗಳನ್ನು ಬೆಳಸಿಕೊಂಡು ತೊಳಲಾಡುತ್ತಿದ್ದಾರೆ. ಮೂಢನಂಬಿಕೆಗಳಿಗೆ ಧರ್ಮ-ದೇವರು ಕಾರಣವಲ್ಲ. ಮಾನವನ ಸ್ವಾರ್ಥ ಕಾರಣ.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments